Thursday, November 11, 2010

Kannada Lipi Vikasa - A wonderful work on Kannada Script - by Dr M G Manjunath and G K Devaraja Swamy



                 ಕನ್ನಡ ಬರಹದ ಸ್ಥಿತ್ಯಂತರಗಳ ದಾಖಲಿಸುವ ಕನ್ನಡ ಲಿಪಿ ವಿಕಾಸ

                    ಕೃತಿ                : ಕನ್ನಡ ಲಿಪಿ ವಿಕಾಸ
                    ಲೇಖಕರು        : ಡಾ. ಎಂ.ಜಿ. ಮಂಜುನಾಥ ಮತ್ತು ಜಿ.ಕೆ. ದೇವರಾಜಸ್ವಾಮಿ
                    ಪ್ರಕಾಶಕರು      : ಜಗದುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ
                                             ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯ                            
                      ಪುಟಗಳು        : 332            ಬೆಲೆ : ರೂ. 150-00

    ಕನ್ನಡ ಲಿಪಿ ವಿಕಾಸವು ಒಂದು ರೀತಿಯಲ್ಲಿ ಭಾರತೀಯ ಲಿಪಿಶಾಸ್ತ್ರದ ಅಧ್ಯಯನದ ಬೃಹತ್ ವ್ಯಾಪ್ತಿಯನ್ನು ಹೊಂದಿದೆ.  ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪ್ರಚಲಿತವಿದ್ದ ಬಹುತೇಕ ಎಲ್ಲಾ ಲಿಪಿಗಳನ್ನು ಕುರಿತ ಅಧ್ಯಯನ ಇಲ್ಲಿ ನಡೆದಿದೆ....ಶಾಸನಾಧ್ಯಯನಕ್ಕೆ  ಸಂಬಂಧಿಸಿದ ಮಹತ್ವದ ವಿಚಾರಗಳನ್ನು, ಭಾರತ ಮತ್ತು ಕನರ್ಾಟಕಗಳಲ್ಲಿ ಶಾಸನಾಧ್ಯಯನ ನಡೆದು ಬಂದ ಬಗೆಯ ಪರಿಚಯ ಇಲ್ಲಿದೆ.... ಮಣ್ಣಿನಿಂದ ಪ್ರಾರಂಭಿಸಿ ಕಾಗದದವರೆಗೆ ಬಳಸಲಾಗಿರುವ ವಿವಿಧ ಸಾಮಗ್ರಿಗಳು ದಾಖಲೆೆಗೊಂಡಿರುವ ಮಹತ್ವದ ವಿಚಾರಗಳನ್ನು ಪರಿಶೀಲಿಸಿ ಪರಿಚಯಿಸಲಾಗಿದೆ.... ಬೀಜರೂಪದ ಬರವಣಿಗೆಯಿಂದ ಎಲಮೈಟ್ ಲಿಪಿಯವರೆಗಿನ ಲಿಪಿವಿಕಾಸದ ಹಂತಗಳನ್ನು, ವಿವಿಧ ನಾಗರೀಕತೆಗಳಿಗೆ ಸಂಬಂಧಿಸಿದ ಬರಹ ರೂಪಗಳನ್ನು, ವಿಶೇಷವಾಗಿ ಸಿಂಧೂ ಸಂಸ್ಕೃತಿಯ ಬರಹಗಳನ್ನು ಪರಿಚಯಿಸಲಾಗಿದೆ.... ಅಶೋಕನ ಬ್ರಾಹ್ಮೀ ಲಿಪಿಯಿಂದ ಪ್ರಾರಂಭಿಸಿ ಮೈಸೂರು ಒಡೆಯರ ಕಾಲದ ಲಿಪಿಯವರೆಗೆ ಎಲ್ಲಾ ಕಾಲಘಟ್ಟದ ಲಿಪಿ ಸ್ವರೂಪಗಳನ್ನೂ, ಕಾಗುಣಿತಗಳ ಸಹಿತ ನೀಡಲಾಗಿದೆ..... ಶಾಸನಾಭ್ಯಾಸಿಗಳ ಅನುಕೂಲಕ್ಕಾಗಿ ಅರವತ್ತಮೂರು ಶಾಸನಗಳ ಚಿತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪಠ್ಯವನ್ನು ನೀಡಿ ಗ್ರಂಥಕರ್ತರು ಉಪಕರಿಸಿದ್ದಾರೆ.... ಅನುಬಂಧದಲ್ಲಿ ಕನರ್ಾಟಕವನ್ನಾಳಿದ ಬಹುತೇಕ ಎಲ್ಲಾ ರಾಜವಂಶಗಳ ವಂಶಾವಳಿಯನ್ನು ಅವರ ಆಳ್ವಿಕೆಯ ಕಾಲದೊಂದಿಗೆ ನೀಡಿದ್ದಾರೆ.  ನಂತರದ ಭಾಗದಲ್ಲಿ ಸಂವತ್ಸರ, ಮಾಸ, ತಿಥಿ ಇತ್ಯಾದಿ ಪಂಚಾಂಗದ ವಿವರಗಳನ್ನು ನೀಡಿ ಕೃತಿಯ ಉಪಯುಕ್ತತೆಯನ್ನು ಹೆಚ್ಚಿಸಿದ್ದಾರೆ, ಎನ್ನುವ ಪ್ರಸಿದ್ಧ ಹಿರಿಯ ಶಾಸನತಜ್ಞ, ಕನರ್ಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ. ಹೆಚ್. ಎಸ್. ಗೋಪಾಲರಾವ್ ಅವರ ಮುನ್ನುಡಿ ಪ್ರಸ್ತುತ ಕೃತಿಯ ಹಿರಿಮೆಯನ್ನು ಬೀಜರೂಪದಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
    ಕನ್ನಡ ಭಾಷೆಯನ್ನು ಅಭಿಜಾತ ಭಾಷೆಯೆಂದು ಕರೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಲಿಪಿಯ ಬಗ್ಗೆ ಆಗಿರುವ ಸಂಶೋಧನೆಯ ಕುರಿತಾದ ಗ್ರಂಥವೊಂದು ತೆಲುಗುನಾಡಿನಿಂದ ಪ್ರಕಟವಾಗಿ ಕಣ್ತೆರೆಸುತ್ತಿದೆ.  ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನವಿರುವ ಮಂತ್ರಾಲಯದ ಮಠದಿಂದ ಶ್ರೀ ರಘುನಂದನ ರಾಘವೇಂದ್ರಮಾಲಾದ 101 ಪುಸ್ತಕಗಳಲ್ಲಿ 93ನೇ ಪುಷ್ಪವಾಗಿ ಪ್ರಕಟವಾಗಿರುವ ಕನ್ನಡ ಲಿಪಿ ವಿಕಾಸ ಎಂಬ ಅಪರೂಪದ ಕೃತಿ ಈಗ ಲಭ್ಯವಾಗುತ್ತಿಲ್ಲ.  ಮರುಮುದ್ರಿಸಲು ಯಾರಾದರೂ ಮುಂದೆಬಂದಾರೆಯೇ?
    ಕನ್ನಡ ಎಂ.ಎ., ಪುರಾತತ್ತ್ವಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರದ ಪ್ರಮುಖ ಆಕರ ಗ್ರಂಥವಾಗಿರುವ ಹಾಗೂ ಶಾಸನ ಸಂಶೋಧಕರಿಗೆ ಅಗತ್ಯವಾಗಿರುವ ಈ ಗ್ರಂಥ ಸಕಲ ರೀತಿಯಿಂದಲೂ ಉತ್ಕೃಷ್ಟವಾಗಿದೆ. ಕನ್ನಡ ಲಿಪಿಶಾಸ್ತ್ರ ಎಂಬ ಹೊತ್ತಗೆ ರಚಿಸಿದ ಡಾ. ಎಂ.ಜಿ. ಮಂಜುನಾಥ ಮತ್ತು ಜಿ.ಕೆ. ದೇವರಾಜಸ್ವಾಮಿ ಅವರು ಅದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಹತ್ತುವರ್ಷಗಳ ಸಂಶೋಧನೆಯ ಫಲ ಈ ಕನ್ನಡ ಲಿಪಿ ವಿಕಾಸ.
    ಮುನ್ನುಡಿ ಬೆನ್ನುಡಿಗಳ ಹೊರತಾಗಿ ಒಟ್ಟು ಇಪ್ಪತ್ತೆಂಟು ಅಧ್ಯಾಯಗಳು ಮತ್ತು ನಾಲ್ಕು ಅನುಬಂಧ ಟಿಪ್ಪಣಿಗಳನ್ನು ಹೊಂದಿರುವ  ಕನ್ನಡ ಲಿಪಿ ವಿಕಾಸ ಕೃತಿಯಲ್ಲಿ ಕನ್ನಡ ಲಿಪಿಯ ಜೊತೆ ಕನರ್ಾಟಕದಲ್ಲಿ ಲಭಿಸಿರುವ ಬ್ರಾಹ್ಮೀ, ದೇವನಾಗರಿ, ನಂದಿನಾಗರಿ, ಗ್ರಂಥ, ಅರವ, ವಟ್ಟೆಳತ್ತು, ತಿಗಳಾರಿ, ತುಳು, ತೆಲುಗು, ಶಂಕು ಲಿಪಿ, ಮೋಡಿ ಬರಹ ಇತ್ಯಾದಿಗಳ ಸಾಂದಭರ್ಿಕ ಅಧ್ಯಯನವಿದೆ.  ಕನ್ನಡ ಅಂಕೆಗಳ ವಿಕಾಸಕ್ಕೂ ಪ್ರತ್ಯೇಕ ಅಧ್ಯಾಯವಿದೆ.  ಮಣ್ಣು, ಕಲ್ಲು, ಕಬ್ಬಿಣ, ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ, ಮರ, ಚರ್ಮ, ಸ್ಫಟಿಕ, ಶಂಕು, ಭೂರ್ಜಪತ್ರ, ತಾಳೆಗರಿ, ಕಡತ, ಕಾಗದ, ಸೀಸ, ಆನೆಯದಂತ, ಪ್ರಾಣಿಗಳ ಮೂಳೆಗಳು, ಮರದ ಎಲೆಗಳಲ್ಲಿ ಮೂಡಿರುವ ಲಿಪಿಗಳ ದಾಖಲೆ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
    ಬೀಜರೂಪದ ಬರವಣಿಗೆ, ವಿಗ್ರಹರೂಪ ಮತ್ತು ತಾಂತ್ರಿಕ ಬರವಣಿಗೆ, ಚಿತ್ರಲಿಪಿ, ಭಾವಲಿಪಿ, ಅಂತರಾವಸ್ಥೆಯ ಲಿಪಿ, ಕ್ರೀಟನ್ ಲಿಪಿ, ಹೆಟ್ಟೈಟ್ ಲಿಪಿ, ಸುಮೇರಿಯನ್ ಲಿಪಿ, ಧ್ವನಿಲಿಪಿ, ಶಬ್ದಾತ್ಮಕ ಲಿಪಿ, ಹೈರೋಗ್ಲಿಫಿಕ್ ಲಿಪಿ, ಹೈರಾಟಿಕ್ ಲಿಪಿ, ಡಿಮೋಟಿಕ್ ಲಿಪಿ,  ಎಲಮೈಟ್ ಲಿಪಿ, ಕ್ಯೂನಿಫಾರಂ ಲಿಪಿಗಳ ಪ್ರಸ್ತಾಪದೊಂದಿಗೆ ವರ್ಣಮಾಲೆಯ ಉಗಮದ ಇತಿಹಾಸವನ್ನು ವಿವರವಾಗಿ ತಿಳಿಸಲಾಗಿದೆ.  ಜೈನಸೂತ್ರಗಳಲ್ಲಿ ಉಲ್ಲೇಖಿಸಿರುವ ಹದಿನೆಂಟು ಲಿಪಿಗಳು, ಬೌದ್ಧಗ್ರಂಥವಾದ ಲಲಿತ ವಿಸ್ತಾರದಲ್ಲಿ ಕೊಟ್ಟಿರುವ ಅರವತ್ತನಾಲ್ಕು ಲಿಪಿಗಳು, ವಿದೇಶಿ ಲಿಪಿಗಳು, ಬುಡಕಟ್ಟು ಲಿಪಿಗಳು, ಜನಾಂಗೀಯ ಲಿಪಿ, ಚಿತ್ರಲಿಪಿ, ಗೂಢಲಿಪಿ, ಕೊರೆಯಲ್ಪಟ್ಟ ಲಿಪಿ, ಅಲಂಕಾರಿಕ ಲಿಪಿ, ಶೀಘ್ರಲಿಪಿ, ಗ್ರಂಥಲಿಪಿ, ಗಣಿತದ ವಿಶೇಷ ಲಿಪಿ, ಅಮಾನುಷ / ಕಾಲ್ಪನಿಕ ಲಿಪಿಗಳನ್ನು ಚುಟುಕಾಗಿ ವಿವರಿಸಲಾಗಿದೆ.
    ಶಾಸನ ಸಂಪಾದನೆಯ ವಿಧಿ ವಿಧಾನಗಳು ಅಧ್ಯಾಯದಲ್ಲಿ ಪಡಿಯಚ್ಚು ತೆಗೆಯುವ ವಿಧಾನಗಳು ಮತ್ತು ಅವುಗಳಿಗೆ ಬೇಕಾದ ಸಾಮಗ್ರಿಗಳನ್ನು ಕುರಿತ ವಿಸ್ತೃತ ವಿವರಣೆಯಿದೆ.  ಶಾಸನಗಳಲ್ಲಿ ಕಾಲಗಣನೆ ಅಧ್ಯಾಯದಲ್ಲಿ ಕಲಿಯುಗ ಸಂವತ್ಸರ, ಸೃಷ್ಟಿಗತಾಬ್ದ ವರ್ಷ,  ಶಾಲಿವಾಹನ ಶಕ ಸಂವತ್ಸರ, ವಿಕ್ರಮ ಶಕೆ, ಚಾಲುಕ್ಯ ವಿಕ್ರಮ ಶಕೆ, ಬಿಜ್ಜಳ ಶಕೆ, ಮಹಾವೀರ ಸಂವತ್ಸರ, ಹಿಜಿರ ಶಕೆ, ಸಾಂಕೇತಿಕ ಕಾಲಗಣನೆಯ ವಿವರಗಳಿವೆ. ಸೃಷ್ಟಿಯು ಒಂದು ಸಾವಿರದ ಒಂಬೈನೂರ ಐವತ್ತೈದು ಕೋಟಿ ಐವತ್ತೆಂಟು ಲಕ್ಷ ಎಂಬತ್ತಮೂರು ಸಾವಿರದ ಒಂದು ನೂರಾ ಎರಡರಲ್ಲಿ (1955,58,83,102) ಆರಂಭವಾಯಿತೆಂಬ ನಂಬಿಕೆ ಇದೆ ಎನ್ನುವ ಉಲ್ಲೇಖ ಓದುಗರನ್ನು ಚಕಿತಗೊಳಿಸುತ್ತದೆ.
    ...ದೇಶದೆಲ್ಲೆಡೆ ಅರಳಿದ್ದ, ಅರಳಿದ್ದರೂ ಜನಮಾನಸಕ್ಕೆ ಗೋಚರವಾಗದೆ ಗುಪ್ತವಾಗುಳಿದಿದ್ದ ಹಲವಾರು ಅಪೂರ್ವ ಗ್ರಂಥಕುಸುಮಗಳನ್ನು ಆಯ್ದು ತಂದು ಪೋಣಿಸಿದ ಶ್ರೀ ರಘುನಂದನ ರಾಘವೇಂದ್ರಮಾಲಾದ 101 ಪುಸ್ತಕಗಳ ವೈಜಯಂತಿ ಜ್ಞಾನವೃಕ್ಷವನ್ನು ಅಲುಗಾಡಿಸುವ ಕಿರು ಪ್ರಯತ್ನವಾಗಿದೆ.  ಕೆಳಗೆ ಬಿದ್ದ ಫಲ ಹಾಗೂ ಪುಷ್ಪಗಳು ಜಿಜ್ಞಾಸುಗಳ ಹೃನ್ಮನೋಮಂದಿರಗಳನ್ನು ಅಲಂಕರಿಸಿದರೆ ಸಾಹಿತ್ಯಕೃಷಿಕರ ಶ್ರಮ ಸಾರ್ಥಕವಾದೀತು... ಎನ್ನುವ ರಾಜಾ ಎಸ್. ರಾಜಗೋಪಾಲಾಚಾರ್ಯರ ಆಪ್ತನುಡಿಗಳು ಈ ಕನ್ನಡ ಲಿಪಿ ವಿಕಾಸ ಕೃತಿಗೆ ಭೂಷಣವಾಗಿವೆ.  ಶಿಕ್ಷಣಾಸಕ್ತರು, ಭಾಷಾಭ್ಯಾಸಿಗಳು ಒಮ್ಮೆ ಇದನ್ನು ಖಂಡಿತಾ ಓದಬೇಕು.
                                                                                                                       ಕೃತಿಪರಿಚಯ - ಯಾಜ್ಞವಲ್ಕ್ಯ
                                                

Kannada Lipi Vikasa - A wonderful work on Kannada Script
by Dr M G Manjunath and G K Devaraja Swamy

1 comment:

Dr. Chandrashekar Gudada said...

where I will get this book..Please..