Friday, February 20, 2009

Resurrection of Poetry - A Poem by Bedre Manjunath

22-02-2009




ಮರುಹುಟ್ಟು

ಕಾವ್ಯ ಸತ್ತುಹೋಗಿದೆ! - ಘೋಷಿಸಿದರು
ನಾಡಿ ಹಿಡಿದ ನಾಡಿಗರು, ಕಾವ್ಯದ ಡಾಕ್ಟರರು
ಅಮೃತೋತ್ಸವ ವೇದಿಕೆಯಲ್ಲಿ
ಅಯ್ಯೋ! ಪ್ರೇತವಾದೆವೆ ನಾವೆಲ್ಲಾ
ಹಲುಬಿದವನು ವೇದಾತೀರದ ಕವಿ.
ಬುದ್ಧಿವಂತರ ಮರಡಿಯ ಕಣಿವೆಯಲ್ಲಿಮಲಗಿಸಿ
ಎತ್ತರೆತ್ತರದ ಸ್ಮಾರಕ ಕಟ್ಟೋಣ
ಆರಾಧನೆಯಲ್ಲಿ ಕಾವ್ಯಾಂಜಲಿ ಅರ್ಪಿಸೋಣ
ತೀರ್ಥಕ್ಕೆ ವ್ಯವಸ್ಥೆಯಾಗಿದೆ
ಪಾಸಾಯಿತು ಠರಾವು
ವೇದಿಕೆ ಏರಿತು ಜಾತ್ಯತೀತ ಶವಸಂಪುಟ
ಕಾವ್ಯಪುಷ್ಪಗಳಿಂದ ಸಿಂಗರಿತ ಕಳೇವರ
ಜಡಿಯಲು ಬಂಗಾರ, ಬೆಳ್ಳಿ, ಪ್ಲಾಟಿನಂ, ಹಿತ್ತಾಳೆ
ಇಂಗಳದಾಳಿನ ತಾಮ್ರದ ಉದ್ದುದ್ದ ಮೊಳೆಗಳು
ಕವಿಗೊಂದು ಮೊಳೆ, ಸುದೀರ್ಘ ಜಡಿತ
ಹುಗಿದುಬಿಡಿ ಬೇಗ, ತಡವಾದೀತು ತೀರ್ಥಕ್ಕೆ
ಕವಿ, ಕಿವಿ, ಕಾವ್ಯೋದ್ಧಾರಕರ ಅವಸರ
ಅಯ್ಯಯ್ಯೋ! ಸ್ವಲ್ಪ ತಾಳಿರಪ್ಪ. ಬರಹೇಳಿದ್ದೇವೆ
ದೂರದೂರದ ಬಂಧು ಬಾಂಧವರೆಲ್ಲರಿಗೆ
ಕವಿಗಳ ಜೊತೆ ಕಾವಿಗಳೂ ಭೋರಿಟ್ಟರು
ದಾರದ ಪೌರೋಹಿತ್ಯ, ಭಾರದ ಪಾರುಪತ್ಯ!
ಯಬ್ಬೇ! ನನ್ನವ್ವಾ! ಇಷ್ಟು ಬೇಗ ಹೊರಟೆಯಲ್ಲೇ
ಗೋಳಾಡಿದ ಹೂಗೊಂಚಲು ತಂದ ತಾಳ್ಯದಯ್ಯ
ಮೊಳೆ ಎಬ್ಬಲು ಸಲಾಕೆ ತಂದ ಮುತ್ತೆತ್ತಿರಾಯ!
ಜಂಗುಳಿಯ ಸರಿಸಿ, ಒಂದೊಂದೇ ಮೊಳೆ ಎಬ್ಬಿಸಿ
ಪ್ರೀತಿ ಅಮೃತ ಸವರಿ, ತುಟಿ ಹಚ್ಚಿ, ಉಸಿರು ತುಂಬಿ
ಎದೆ ಭಾರವನಿಳಿಸಿ, ಪುಪ್ಪುಸಗಳ ಒತ್ತಿ, ಅಪ್ಪಿ ಹಿಡಿದೆತ್ತಿ
ಮರು ಜೀವ ನೀಡಿ ಪವಾಡವನ್ನೇ ಸೃಷ್ಟಿಸಿದ ಶಾಂತೇಶ
ಕವಿಗೋಷ್ಠಿಯ ಕೂರಂಬು ಸಾಲುಗಳ, ಖಡ್ಗದಾರ್ಭಟಕೆ
ಬವಳಿಬಂದು ಬಿದ್ದಿದ್ದ ಕಾವ್ಯ ಕನ್ನಿಕೆ ಧಿಗ್ಗನೆದ್ದವಳೇ
ಧನ್ಯ ಕವಿಯೇ, ಧನ್ಯ. ಹುಗಿದು ಬಿಡುತ್ತಿದ್ದರುನನ್ನನಿವರು,
ನೀ ಬರುವುದು ಸ್ವಲ್ಪ ತಡವಾಗಿದ್ದರು
ಹೂಗೊಂಚಲು ಬಿಡಿಸಿ, ಮುಡಿಗೇರಿಸಿ
ಕಾವ್ಯಾಂಬರದ ರೇಶಿಮೆ ನಡೆಮುಡಿಯ ಮೇಲೆ
ಹೂ ಹೆಜ್ಜೆ ಹಾಕಿ, ಬೆಳದಿಂಗಳ ನಗೆ ಚೆಲ್ಲಿ
ಅಂತರ್ಧಾನಳಾದಳು ಕವಿಯ ಎದೆಯಲ್ಲಿ
ಕಾವ್ಯ ಕನ್ನಿಕೆ ಸತ್ತಿಲ್ಲ, ಸಾಯುವುದೂ ಇಲ್ಲ
ಅಮೃತದ ಸಾಲುಗಳಿರುವವರೆಗೂ ಅಮರ ಜೀವಿ
ಅಮೃತೋಪಮ ಕಾವ್ಯಧಾರೆ ಸುರಿಯುತಿದೆ, ಎಲ್ಲೆಲ್ಲೂ
ಬನ್ನಿರಿ! ಹಿಡಿಯಿರಿ! ಸವಿಯಿರಿ! ಹಂಚಿರಿ!
(ಚಿತ್ರದುರ್ಗದಲ್ಲಿ ನಡೆದ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಸ್ಪೂರ್ತಿಯಿಂದ.)
ಬೇದ್ರೆ ಮಂಜುನಾಥ