Saturday, March 14, 2009

Makkala Sahitya : Andu - Indu - Compilation of Essays on Children's Literature by T S Nagaraja Setty



ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತ ಒಂದು ಪಕ್ಷಿನೋಟ
ಕೃತಿ : ಮಕ್ಕಳ ಸಾಹಿತ್ಯ : ಅಂದು - ಇಂದು
ಲೇಖಕರು : ಟಿ.ಎಸ್. ನಾಗರಾಜ ಶೆಟ್ಟಿ ಮತ್ತು ಎಂ.ಜಿ. ಗೋವಿಂದರಾಜು
ಪ್ರಕಾಶಕರು : ನಿರ್ಮಲ ಪ್ರಕಾಶನ, ಗೋವಿನಪುರ ಬಡಾವಣೆ, ತಿಪಟೂರು
ಪುಟಗಳು : 8 + 48 ಬೆಲೆ : ರೂ. 50-00

ಮಕ್ಕಳ ಸಾಹಿತ್ಯ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ದಿನಗಳಲ್ಲಿ ಮಕ್ಕಳಿಗಾಗಿ ಬರೆಯುವವರು 'ವೈಯಕ್ತಿಕವಾಗಿ ನಷ್ಟವಾದರೂ ಚಿಂತಿಲ್ಲ ಒಂದಷ್ಟು ಏನಾದರೂ ಮಾಡೋಣ' ಎಂಬ ಹಂಬಲದಿಂದ ಅಲ್ಲಲ್ಲಿ ಕೃತಿ ಪ್ರಕಟಣೆಯನ್ನು ಮಾಡುತ್ತಲೇ ಬಂದಿದ್ದಾರೆ. ಕಥೆ, ಕವನ, ಚುಟುಕ, ನಾಟಕ, ಚಿಣ್ಣರ ಕಥೆಗಳು ಹಾಗೋ ಹೀಗೋ ಖರ್ಚಾಗಬಹುದು. ಮಕ್ಕಳ ಬಗ್ಗೆ ಪ್ರಬಂಧ, ಸಂಶೋಧನಾ ಲೇಖನಗಳು ಪ್ರಕಟವಾಗುವುದು, ಪ್ರಕಟವಾದರೂ ಖgïಗುವುದು ಅನುಮಾನವೇ. ಆದರೂ ಒಳಗಿನ ತುಡಿತ, ಮಕ್ಕಳ ಸಾಹಿತ್ಯದ ದಾಖಲೀಕರಣ ಎಂಬ ಸೇವೆಯನ್ನು ಪ್ರಾಂಜಲವಾಗಿ ಮಾಡುವ ಕೆಲವರು ಅಲ್ಲಲ್ಲಿ ಇದ್ದಾರೆ. ಈ ಸಾಲಿಗೆ ತೀರಾ ಇತ್ತೀಚೆಗೆ ಸೇರ್ಪಡೆಯಾದ ತಿಪಟೂರಿನ ನಿರ್ಮಲ ಪುಸ್ತಕ ಮಾಲೆಯ 26ನೇ ಹೂ 'ಮಕ್ಕಳ ಸಾಹಿತ್ಯ : ಅಂದು - ಇಂದು'. 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಬಹುಮಾನಿತ ಪ್ರಬಂಧ ಮತ್ತು 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನಗಳನ್ನು ಒಳಗೊಂಡ ಈ ಕೃತಿ ಕನ್ನಡದಲ್ಲಿರುವ ಮಕ್ಕಳ ಸಾಹಿತ್ಯ ಕೃತಿಗಳು, ಕೃತಿಕಾರರು ಮತ್ತು ಪ್ರಕಾಶನಗಳ ಪಕ್ಷಿನೋಟ ನೀಡುವಲ್ಲಿ ಯಶಸ್ವಿಯಾಗಿದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಸುದೀರ್ಘ ಪ್ರಬಂಧ 1977ರಲ್ಲಿ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ದಿ. ಶೇಷಮ್ಮ ಭಾಸ್ಕರರಾಯರ ದತ್ತಿನಿಧಿ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ದುರ್ಗಸಿಂಹನ ಕನ್ನಡ ಪಂಚತಂತ್ರ ಕೃತಿಯಿಂದ ಹಿಡಿದು ಸ್ವಾತಂತ್ರ್ಯ ಪೂರ್ವದ ಪ್ರಮುಖ ಮಕ್ಕಳ ಕೃತಿಗಳ ಕಿರುಚಿತ್ರಣ ನೀಡುವ ಈ ಪ್ರಬಂಧ ಅಂದಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮಕ್ಕಳಿಗಾಗಿ ದುಡಿದವರ ಪರಿಚಯವನ್ನೂ ಮಾಡಿಕೊಡುತ್ತದೆ. ನವೋದಯ ಪಂಥದ ಅನೇಕ ಹಿರಿಯರು, ಪಂಜೆ ಮಂಗೇಶರಾಯರು, ಕುವೆಂಪು, ಜಿ.ಪಿ. ರಾಜರತ್ನಂ, ಹೊಯಿಸಳ, ದಿನಕರ ದೇಸಾಯಿ ಮೊದಲಾದವರು, ಮಕ್ಕಳಿಗಾಗಿ ಕಥನ ಕವನ, ಪದ್ಯಗಳು, ನಾಟಕ, ಕಥೆಗಳನ್ನು ರಚಿಸಿದ್ದು ಮಕ್ಕಳ ಮೇಲಿನ ಅವರ ಕಳಕಳಿಗೆ ಸಾಕ್ಷಿಯಾಗಿದ್ದರೆ, ಮಕ್ಕಳ ನಾಲಿಗೆಯ ಮೇಲೆ ಅವು ನಲಿದಾಡುತ್ತಿರುವುದು ಅವುಗಳ ಜನಪ್ರಿಯತೆ ತೋರಿಸಿದೆ. 1977ರವರೆಗೆ ಲಭ್ಯವಿದ್ದ ಮಾಹಿತಿಯನ್ನಷ್ಟೇ ಆಧರಿಸಿ ರಚಿಸಿದ ಪ್ರಬಂಧ ಕೇವಲ ಪರಿಚಯಾತ್ಮಕ ನೆಲೆಯಲ್ಲಿ ನಿಲ್ಲುತ್ತದೆ. ಮೂವತ್ತು ವರ್ಷಗಳ ನಂತರ ಪುಸ್ತಕ ರೂಪದಲ್ಲಿ ಬರುವಾಗ ಒಮ್ಮೆ ಪರಿಷ್ಕರಿಸಲ್ಪಡುವ ಅಗತ್ಯವಿತ್ತು. ಕನ್ನಡ ವಿಶ್ವಕೋಶದಲ್ಲಿ ಚೂರು ಇಣುಕಿದ್ದರೂ ಇನ್ನಷ್ಟು ಮಾಹಿತಿ ಸಿಗುತ್ತಿತ್ತು. ಕೇವಲ ದಾಖಲೆಗಾಗಿ ಮಾತ್ರ ಮೂಲ ಪ್ರಬಂಧವನ್ನು ಉಳಿಸಿಕೊಂಡು ಕೊನೆಯಲ್ಲಿ 'ಅಪ್ಡೇಟ್' ಎಂಬ ಪರಿಷ್ಕರಣ ಪುಟ ಸೇರಿಸಿದ್ದರೆ ಇನ್ನಷ್ಟು ಸಮಕಾಲೀನವಾಗುತ್ತಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೈದರಾಬಾದ್ ಕನ್ನಡ, ಮುಂಬೈ ಕನ್ನಡದ ನೆಲದಲ್ಲಿ ಮಕ್ಕಳ ಸಾಹಿತ್ಯ ಬೇರೆ ಬೇರೆ ಪ್ರಭಾವಗಳಿಗೆ ಒಳಗಾದರೂ ಚೆನ್ನಾಗಿ ಬೆಳೆದು ಹೂ ಬಿಟ್ಟಿತ್ತು ಎನ್ನುವುದನ್ನು ದಾಖಲಿಸಲು ಅಂದಿನ ಮಾಹಿತಿ ಲಭ್ಯತೆಯ ಕೊರತೆ ಕಾರಣವಾಗಿದ್ದಿರಬಹುದು. ಆದರೆ ಮೂವತ್ತು ವರ್ಷಗಳ ನಂತರ ಮಾಹಿತಿ ಬೆರಳುಗಳ ತುದಿಯಲ್ಲಿ ಕುಣಿಯುತ್ತಿರುವಾಗ ಮೂಲಕ್ಕೆ ಒಂದಷ್ಟು ಪೂರಕವೂ ಪೋಷಕವೂ ಆಗುವ ಮಾಹಿತಿಯನ್ನು ಕಲೆಹಾಕುವುದು ಅಗತ್ಯವಾಗಿತ್ತು ಎನಿಸುತ್ತದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನ 2007 ರವರೆಗೆ ಲಭ್ಯವಿರುವ ಮಾಹಿತಿಯ ಸಂಗ್ರಹದಂತಿದೆ. ಮಕ್ಕಳ ಸಾಹಿತಿಗಳ ಬೃಹತ್ ಕೋಶ ಸಿದ್ಧಪಡಿಸುತ್ತಿರುವ ನಾಗರಾಜ ಶೆಟ್ಟಿ ಅವರಲ್ಲಿ ನೂರಾರು ಮಕ್ಕಳ ಸಾಹಿತಿಗಳ ಮಾಹಿತಿ ಲಭ್ಯವಿದ್ದರೂ ಬಹುತೇಕ ಕೃತಿಗಳ ಮತ್ತು ಕೃತಿಕಾರರ ಹೆಸರು ಉಲ್ಲೇಖವಾಗಿಲ್ಲ. ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿರುವ ನೂರಾರು ಲೇಖಕರ ಒಂದಾದರೂ ಕೃತಿಯನ್ನು ಹೆಸರಿಸಬೇಕು ಎಂಬ ಆತುರದಲ್ಲಿ ಸುದೀರ್ಘ ಪಟ್ಟಿಯನ್ನಷ್ಟೇ ನೀಡಿದಂತಿದೆ. ವಿಮಶರ್ಾತ್ಮಕ ದೃಷ್ಟಿಕೋನದಿಂದ ಸಮಕಾಲೀನ ಮಕ್ಕಳ ಸಾಹಿತ್ಯ ಕೃತಿಗಳನ್ನು ಅವಲೋಕಿಸಿರುವ ಎನ್.ಎಸ್. ರಘುನಾಥ್, ಆನಂದ ಪಾಟೀಲರ ಹೇಳಿಕೆಗಳನ್ನು ಬಿಟ್ಟರೆ ತುಲನಾತ್ಮಕವಾಗಿ ಏನನ್ನೂ ಹೇಳಿಲ್ಲ.

'ಮಕ್ಕಳಿಗಾಗಿ ಮಾಹಿತಿ ಸಾಹಿತ್ಯ', 'ಸಾಹಸ ಸಾಹಿತ್ಯ' ಎಂಬ ವಿಶಿಷ್ಟ ಪ್ರಕಾರಗಳ ಜೊತೆ ಚಟುವಟಿಕೆಗಳಿಂದ ಕೂಡಿದ 'ಮಕ್ಕಳ ಶೈಕ್ಷಣಿಕ ಹಾಗೂ ವಿಜ್ಞಾನ ಸಾಹಿತ್ಯ' ಸಮೃದ್ಧವಾಗಿ ಬೆಳೆದಿದೆ. ಮಕ್ಕಳ ಪತ್ರಿಕೆಗಳಲ್ಲಿ ಮತ್ತು ಪ್ರಕಾಶನಗಳಲ್ಲಿ ಮಕ್ಕಳಿಗಾಗಿಯೇ ಹೊಸ ಚಟುವಟಿಕೆ ಆಧರಿತ ಪುಟಾಣಿ ಪುಸ್ತಕಗಳ ರಾಶಿಯೇ ಬಿದ್ದಿದೆ. ಅಂತರಜಾಲದಲ್ಲಿ 'ಪುಟಾಣಿಗಳ ಇ-ಪತ್ರಿಕೆಗಳು, ಶಾಲಾ ಗೋಡೆ ಪತ್ರಿಕೆ'ಗಳು, ಪ್ರಮುಖ ಪತ್ರಿಕೆಗಳ ಮಕ್ಕಳ ಪುರವಣಿಗಳು ಮಕ್ಕಳ ಸಾಹಿತ್ಯಕ್ಕೆ, ಮಕ್ಕಳೇ ರಚಿಸಿದ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳು, ಚಿಲಿಪಿಲಿ ಪ್ರಕಾಶನ ಮತ್ತು 'ಸಂಧ್ಯಾ' ಮಕ್ಕಳ ಪತ್ರಿಕೆ ಕೊಡಮಾಡುತ್ತಿರುವ ಮಕ್ಕಳ ಪ್ರಶಸ್ತಿಗಳ ವಿವರಗಳು ಇಲ್ಲದೆ ಈ ಕೃತಿ ಸೊರಗಿದೆ. ದೆಹಲಿಯ ರತನ್ ಟಾಟಾ ಫೌಂಡೇಶನ್ ನವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತಂತೆ ಸಮಗ್ರವಾದ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿದ್ದು ಇದುವರೆಗೆ ಲಭ್ಯವಿರುವ ಎಲ್ಲ ಮಾಹಿತಿ ಅದರಲ್ಲಿ ಅಡಕಗೊಳ್ಳಲಿದೆ. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕೊರತೆಗಳಿಂದ ಕೂಡಿರುವ ಕೃತಿಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಕನ್ನಡ ಮಕ್ಕಳ ಸಾಹಿತ್ಯದ ಪಾಲಿಗಿದೆ!
ಬೇದ್ರೆ ಮಂಜುನಾಥ

1 comment:

Unknown said...

sir who is makkala sahitya pitamaha